Wednesday, February 24, 2016

Sports Day


                                                          ಕಲಿಯುವ ಮನೆಯಲ್ಲಿ ಕ್ರೀಡಾದಿನೋತ್ಸವ

      ಅಂದು ಫೆಬ್ರುವರಿ ೨೦, ಶನಿವಾರ. ಕೆಂಚಲಗೂಡು ಗ್ರಾಮದಲ್ಲಿರುವ ದಿವ್ಯದೀಪ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಕಲಿಯುವ ಮನೆ ಎಂಬ ಪ್ರಯೋಗಾತ್ಮಕ ಶಾಲೆಗೆ ಹಲವಾರು ದ್ವಿಚಕ್ರ ವಾಹನಗಳು ಬಂದವು. ಸುಮಾರು ಏಳೆಂಟು ಜನ ಸ್ವಯಂಸೇವಕರು ಅಂದು ಅಲ್ಲಿಗೆ ಬಂದಿದ್ದರು. ಆಗ ಸಮಯ ೭:೩೦.  ಆ ಹೊತ್ತಿನಲ್ಲಿ ಕಲಿಯುವ ಮನೆಗೆ ಸಹಜವಾಗಿ ಸ್ವಯಂಸೇವಕರು ಬರುವುದಿಲ್ಲ. ಆದರೆ ಅಂದು ಬರಲು ಒಂದು ವಿಶೇಷ ಕಾರಣವಿತ್ತು. ಮಾರನೆ ದಿನ ನಡೆಯುವ ಕ್ರೀಡಾ ದಿನೋತ್ಸವದ ಪೂರ್ವತಯಾರಿಗಾಗಿ ಅವರೆಲ್ಲರೂ ಅಲ್ಲಿ ನೆರೆದಿದ್ದರು.  ಸ್ವಯಂಸೇವಕರೆಂದರೆ ಮತ್ತಾರೂ ಅಲ್ಲ. ಸಮಾಜದ ಬಗ್ಗೆ ಕಳಕಳಿ ಬೆಳೆಸಿಕೊಂಡಿರುವ, ಮಕ್ಕಳ ಮೇಲೆ ಅನುಕಂಪವಿರುವ, ಕೆಚ್ಚೆದೆಯ ಯುವಕ ಯುವತಿಯರು- ಇಂಜಿನಿಯರಿಂಗ್ ವಿದ್ಯಾರ್ಥಿಗಳು.

ಆಗ ಅಲ್ಲಿಗೆ ಬಂದವರು- ವಾಧಿರಾಜ್,ಮೋನೀಶ್, ಇಂದ್ರೇಶ್, ಬಿಂದು ಮತ್ತೆ ರಕ್ಷಿತ್.  ಅವರು ಅಲ್ಲಿಗೆ ಬಂದಾಗ ಕೆಲವು ಮಕ್ಕಳು ಆಟವಾಡುತ್ತಿದ್ದರು, ಇನ್ನು ಕೆಲವು ಮಕ್ಕಳು ಮಾತನಾಡುತ್ತ ಕುಳಿತಿದ್ದರು. ಇವರೆಲ್ಲರೂ ಅಲ್ಲಿಗೆ ಬಂದದ್ದನ್ನು ನೋಡಿ ಅವರಿಗೆ ಆನಂದವೋ ಆನಂದ. ಇವರ ಹತ್ತಿರ "ಅಣ್ಣ, ಅಕ್ಕ" ಎನ್ನುತ್ತ ಬಂದು ತಬ್ಬಿಕೊಂಡವು.  

ಈ ಐವರು ಕೆಲವು ಕಾಲ ಮಕ್ಕಳೊಂದಿಗೆ ಆಟವಾಡುತ್ತ, ಮಾತನಾಡುತ್ತ, ರಂಜಿಸುತ್ತ ಕಾಲ ಕಳೆದರು. ೯ ಗಂಟೆಯ ಹೊತ್ತಿಗೆ ಸಂಕೇತ್ ಮತ್ತು ವೈಭವ್ ಇವರನ್ನು ಕೂಡಿಕೊಂಡರು. ನಂತರ ಎಲ್ಲರೂ ಒಟ್ಟಾಗಿ ಭೋಜನ ಮಾಡಿದರು.
        ಊಟದ ನಂತರ ಎಲ್ಲರೂ ತಾವು ಬಂದ ಮುಖ್ಯ ಕಾರ್ಯವನ್ನು ಮಾಡಲು ತಯಾರಾದರು.  ಎಲ್ಲರೂ ಗುರು ಕುಟೀರ ಎಂಬ ಸ್ವಯಂ ಸೇವಕರ ಕೊಠಡಿಯಲ್ಲಿ ಸೇರಿದರು. 
          ಹಿಂದಿನ ದಿವಸ ಮೋನಿಶ್, ಅಭಿಷೇಕ್, ಇಂದ್ರೇಶ್ ಮತ್ತೆ ಬಿಂದು ಮನ್ನಾಸ್ ಮಾರ್ಕೆಟ್ ಮತ್ತೆ ಸಯ್ಯಾಜಿ ರಸ್ತೆಗೆ ಹೋಗಿ ಹಲವಾರು ಗಿಫ್ಟ್ ಗಳನ್ನು ತಂದಿದ್ದರು; ಆಟದಲ್ಲಿ ಗೆಲ್ಲುವ ಮಕ್ಕಳಿಗೆ ಕೊಡುವುದಕ್ಕೋಸ್ಕರ. ಆ ಉಡುಗೊರೆಗಳನ್ನೆಲ್ಲ ಚೆನ್ನಾಗಿ ಬಣ್ಣ ಬಣ್ಣದ ಕಾಗದದಲ್ಲಿ ಕಟ್ಟಿದರು. ಉಡುಗೊರೆಯ ಪ್ಯಾಕಿಂಗ್ ಮುಗಿದ ಮೇಲೆ ಮಾರನೆ ದಿನ ನಡೆಯುವ ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧವಾಗಬೇಕಿತ್ತು. ಐದು ನಿಮಿಷ ವಿರಾಮವನ್ನು ತೆಗೆದುಕೊಂಡು ಮತ್ತೆ ಕೆಲಸ ಮಾಡಲು ಅನುವಾದರು.
ಕಲಿಯುವ ಮನೆಯಲ್ಲಿ ಉಳಿದ ಶಾಲೆಗಳಲ್ಲಿರುವಂತೆ ೧,೨... ಎಂದು ತರಗತಿಗಳಿಲ್ಲ. ಮಕ್ಕಳ ಬುದ್ಧಿಮತ್ತೆಗೆ ತಕ್ಕಂತೆ ಹಲವಾರು ಗುಂಪುಗಳಾಗಿ ವಿಂಗಡಿಸಲಾಗಿದೆ. ತುಂಬ ಚಿಕ್ಕ ಮಕ್ಕಳು ಚಿಲಿಪಿಲಿ ಗುಂಪಿಗೆ ಸೇರುತ್ತಾರೆ. ಹಾಗೆ ಚಿಗುರು, ಚೇತನ, ಪೂರ್ಣ, ಪ್ರತಿಭಾ, ಪ್ರಜ್ಞಾ ಮತ್ತು ಶ್ರದ್ಧಾ ಎಂಬ ಹಲವಾರು ಗುಂಪುಗಳಿವೆ. ಮೈತ್ರಿ ಎಂಬ ಗುಂಪು ಹತ್ತನೇ ತರಗತಿಯದ್ದಾಗಿರುತ್ತದೆ. 
          ಈಗ ಆ ಎಲ್ಲಾ ಗುಂಪಿನ ಮಕ್ಕಳನ್ನು ಕ್ರೀಡಾ ದಿನಕ್ಕೋಸ್ಕರ ನಾಲ್ಕು ಗುಂಪಾಗಿ ( ಎ ಬಿ ಸಿ ಡಿ) ವಿಭಜಿಸಲು ಸ್ವಯಂಸೇವಕರು ತೀರ್ಮಾನಿಸಿದರು. ಪ್ರತಿ ಗುಂಪಿನಲ್ಲೂ ಹುಡುಗರದ್ದೊಂದು ಹುಡುಗಿಯರದ್ದೊಂದು ತಂಡಗಳನ್ನು ಮಾಡಿದರು.  ಟೀಮ್ ಎ ಯಲ್ಲಿ ಮೈತ್ರಿ ಮತ್ತೆ ಶ್ರದ್ಧಾ ಗುಂಪಿನವರು, ಟೀಮ್ ಬಿ ಹುಡುಗರ ತಂಡದಲ್ಲಿ ಪ್ರಜ್ಞಾ ಮತ್ತೆ ಪೂರ್ಣ ಗುಂಪಿನವರು ಟೀಮ್ ಬಿ ಹುಡುಗಿಯರಲ್ಲಿ ಚೇತನ ಮತ್ತೆ ಪ್ರತಿಭಾ ಗುಂಪಿನವರು, ಟೀಮ್ ಸಿ ಹುಡುಗರಲ್ಲಿ ಪ್ರತಿಭಾ, ಚೇತನ, ಚಿಗುರು ಗುಂಪಿನವರು, ಟೀಮ್ ಸಿ ಹುಡುಗಿಯರಲ್ಲಿ ಚೇತನ ಮತ್ತೆ ಚಿಗುರು ಗುಂಪಿನವರು, ಟೀಮ್ ಡಿ ಯಲ್ಲಿ ಸಂಪೂರ್ಣವಾಗಿ ಚಿಲಿಪಿಲಿಯ ಮಕ್ಕಳು, ಹೀಗೆ ಮಕ್ಕಳು ಆಡಲು ಅನುಕೂಲವಾಗುವಂತೆ ನಾಲ್ಕು ತಂಡಗಳಾಗಿ ವಿಂಗಡಿಸಿದರು.  ನಂತರ ಮಾರನೆ ದಿನ ನಡೆಯಬೇಕಾದ ಎಲ್ಲ ಆಟೋಟಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಿದರು.
      ಅಷ್ಟು ಹೊತ್ತಿಗೆ ಸಮಯ ೧೦:೧೫ ಆಗಿತ್ತು. ಅಮರೇಶ್, ಚಂದನ್ ಆಗ ತಾನೆ ಬಂದು ಸೇರಿದ್ದರು. ಅವರಲ್ಲದೆ ಅಚ್ಯುತ್, ಪ್ರಕಾಶ್ , ದೀಪಕ್, ಮಹೇಶ್, ವರದರಾಜ್ ಸಹ ಇದ್ದರು. ವಾಧಿರಾಜ್ ಮತ್ತು ವೈಭವ್ ತಮ್ಮ ಮನೆಗೆ ಹೊರಟರು. 
   ಇತ್ತ ಪೂರ್ವ ತಯಾರಿ ಮುಗಿಸಿದ್ದ ಸ್ವಯಂಸೇವಕರೆಲ್ಲರೂ ಮಲಗಲು ಹೊರಟರು. ಆದರೆ ನಿದ್ರೆ ಎಲ್ಲಿ ಬರಬೇಕು. ಸುಮ್ಮನೆ ಗಾಡಿಯನ್ನು ತೆಗೆದುಕೊಂಡು ಸುತ್ತಾಡಲು ಹೊರಟರು.   ರಾತ್ರಿ ಇಡೀ ಸುತ್ತಾಡಿ, ಮಾತನಾಡಿ ಕೊನೆಗೆ ಎಲ್ಲರೂ ಮಲಗಿದಾಗ ಸುಮಾರು ನಾಲ್ಕು ಗಂಟೆಯ ಸಮಯ. ಮಾರನೇ ದಿನ ಮಾಡುವ ಕೆಲಸ ಬಹಳಷ್ಟಿತ್ತು.

  ಫೆಬ್ರುವರಿ ೨೧, ಭಾನುವಾರ. ಕಲಿಯುವ ಮನೆಯಲ್ಲಿ ಕ್ರೀಡಾದಿನೋತ್ಸವ. 

   ವಾಧಿರಾಜ್ ಮತ್ತೆ ಬಂದಾಗ ಬೆಳಗಿನ ಜಾವ ೫:೩೦. ಎಲ್ಲರೂ ಆರಾಮಾಗಿ ನಿದ್ರಿಸುತ್ತಿದ್ದರು. ಈತ ೫:೪೫ ರ ತನಕ ಸುಮ್ಮನೆ ಮಲಗಿದ್ದ. ಅವರೆಲ್ಲರೂ ಎದ್ದೇಳಲಿ ಎಂದು ಕಾಯುತ್ತಿದ್ದ.  ಮೊದಲು ರಕ್ಷಿತ್ ಎಚ್ಚರಗೊಂಡ. ಮುಖ ತೊಳೆದು ವಾಧಿ ಕೊಟ್ಟ ಬಿಸ್ಕೇಟ್ ಅನ್ನು ತಿಂದ. ಅವನಿಗೆ ಸ್ವಲ್ಪ ಹುಷಾರಿಲ್ಲದಂತಿತ್ತು. ನಂತರ ಬಿಂದು, ಅಮರೇಶ್ ಇಂದ್ರೇಷ್, ಸಂಕೇತ್, ಅಚ್ಯುತ್, ದೀಪಕ್, ಮಹೇಶ್, ವರದರಾಜ್ ಚಂದನ್ ಎಲ್ಲರೂ ಕ್ರಮವಾಗಿ ಎದ್ದರು. ತಮ್ಮ ದಿನನಿತ್ಯದ ಕಾರ್ಯಗಳನ್ನು ಮುಗಿಸಿಕೊಂಡು ಕೆಲಸಕ್ಕೆ ಅನುವಾದರು. 
           ೬:೩೦ ರ ಹೊತ್ತಿಗೆ ಎಲ್ಲರೂ ಮೈದಾನಕ್ಕಿಳಿದು ಅದನ್ನು ಸ್ವಚ್ಛಮಾಡಲಾರಂಭಿಸಿದರು. ನಂತರ ನೀರನ್ನು ಚಿಮುಕಿಸಿ ಒಂದು ಹದ ಮಾಡಿ, ಟ್ರ್ಯಾಕ್ ಅನ್ನು ಎಳೆದರು.

     ಅಷ್ಟು ಬೆಳಿಗ್ಗೆಯಲ್ಲಿ ಮಕ್ಕಳಿಗೋಸ್ಕರ  ಕೆಲಸವನ್ನು ಮಾಡುತ್ತಿರುವುದು ಅವರಲ್ಲಿರುವ ಅನುಕಂಪ, ಸೇವಾ ಮನೋಭಾವ ಮತ್ತು ಬಡ ಗ್ರಾಮದ ಮಕ್ಕಳ ಮೇಲಿನ ಪ್ರೀತಿಯನ್ನು ಬಿಂಬಿಸುತ್ತಿತ್ತು. ತಮ್ಮ ಕಾರ್ಯಗಳನ್ನು ಬದಿಗಿಟ್ಟು ಇತರರನ್ನು ತಮ್ಮವರೆಂದುಕೊಂಡು ದುಡಿಯುತ್ತಿರುವ ಆ ವಿದ್ಯಾರ್ಥಿಗಳಿಗೆ ಒಂದು ಸಲಾಮ್. ಭಾರತಮಾತೆ ಬಯಸುವುದು ಇಂತಹ ಮಕ್ಕಳನ್ನೇ. 

      ನಂತರ ಕಬಡ್ಡಿ, ಕೋ ಕೋ, ವಾಲಿಬಾಲ್ ಕ್ರೀಡೆಗಳಿಗೆ ಮೈದಾನವನ್ನು ಸಜ್ಜುಗೊಳಿಸಿದರು. ಅದಾಗುವ ಹೊತ್ತಿಗೆ ಸೂರ್ಯ ಮೇಲೆಬಂದು ಅವರ ಕೆಲಸವನ್ನು ನೋಡುತ್ತ ಕಿರಣಗಳ ಹೂವುಗಳನ್ನು ಇವರೆಲ್ಲರ ಮೇಲೆ ಚೆಲ್ಲುತ್ತಿದ್ದನು. 
        ಸುಮಾರು ೮:೩೦ ರ ಹೊತ್ತಿಗೆ ಎಲ್ಲಾ ರೀತಿಯ ಪೂರ್ವತಯಾರಿ ಸಂಪೂರ್ಣವಾಗಿತ್ತು. ಮಕ್ಕಳು ಬರುವುದನ್ನ ಎದುರುನೋಡುತ್ತಿದ್ದರು. 
         ೯:೧೫ ಕ್ಕೆ ಎಲ್ಲರೂ ತಿಂಡಿಯನ್ನು ಸೇವಿಸಿದರು. ಪುಳಿಯೊಗರೆಯನ್ನು ಎಲ್ಲರೂ ಇಷ್ಟಪಟ್ಟು ತಿಂದರು. ನಂತರ ಗುಂಪು ಆಟಗಳಾದ ವಾಲಬಾಲ್, ಕೋ ಕೋ, ಕಬಡ್ಡಿ ಗಳ ವಿಜೇತರಿಗೆ ಕೊಡಲು ಉಡುಗೊರೆಗಳನ್ನು ತರಲು ವಾಧಿರಾಜ್ ಮತ್ತೆ ಆಗ ತಾನೆ ಬಂದಿದ್ದ ತನುಜ್ ಸಪ್ನ ಬುಕ್ ಹೌಸ್ ಗೆ ಹೋದರು.
      ಅದೇ ಸಂದರ್ಭಕ್ಕೆ ಶಾಲಾ ವಾಹನ ಆಗಮಿಸಿತು. ಮಕ್ಕಳೆಲ್ಲರೂ ಭಾನುವಾರದ ದಿನದಂದು ಶಾಲೆಗೆ ಬಂದಿದ್ದರು. ಬಸ್ ನಿಂದ ಇಳಿಯುತ್ತಿದ್ದಂತೆ ಎಲ್ಲರ ಮುಖದಲ್ಲೂ ಮಂದಹಾಸ. ಅಲ್ಲಿ ನೆರೆದಿದ್ದ ಸ್ವಯಂಸೇವಕರ ಹತ್ತಿರ ಎಲ್ಲರೂ ಓಡಿದರು. ಅವರಲ್ಲೂ ಅಷ್ಟೆ. ಯಾರಿಗೋಸ್ಕರ ತಾವು ಅಷ್ಟು ಹೊತ್ತಿನಿಂದ ಕಾದಿದ್ದರೊ, ಯಾರಿಗೋಸ್ಕರ ತಯಾರಿಗಳನ್ನು ನಡೆಸಿದ್ದರೊ ಆ ಮಕ್ಕಳನ್ನು ಕಂಡಾಗ ಎಲ್ಲರ ಮುಖದಲ್ಲೂ ಸಂತೋಷ. ತಮ್ಮ ಹತ್ತಿರ ಬಂದ ಮಕ್ಕಳನ್ನೆಲ್ಲ ಒಂದು ಕಡೆ ಒಟ್ಟಾಗಿ ಸೇರಿಸಿದರು. ಹಿಂದಿನ ದಿನ ಮಾಡಿದ್ದ ನಾಲ್ಕು ಟೀಮ್ ಗಳ ಅನುಸಾರ ಮಕ್ಕಳನ್ನು ಬೇರ್ಪಡಿಸಿದರು.  ೧೦:೧೫ ರ ಹೊತ್ತಿಗೆ ನಾಲ್ಕು ತಂಡಗಳು ಅದರಲ್ಲಿನ ಮಕ್ಕಳು, ಸ್ವಯಂಸೇವಕರು ಎಲ್ಲರೂ ಕ್ರೀಡಾ ದಿನಕ್ಕೆ ಸಿದ್ಧರಾಗಿದ್ದರು. ಬಸ್ ಉಳಿದ ಸ್ವಯಂಸೇವಕರನ್ನು ಕರೆತರಲು ಹೊರಟಾಗಿತ್ತು. 
      
     ಮತ್ತೆ ಬಸ್ ಬರುವ ವೇಳೆಗೆ ಹಲವಾರು ಸ್ವಯಂಸೇವಕರು ಕಲಿಯುವ ಮನೆಗೆ ಬಂದಿದ್ದರು. ಬಸ್ ಬಂದಾಗ ೧೦:೩೦. ಎಂಟು ಸ್ವಯಂಸೇವಕರನ್ನು ಅದು ಕರೆತಂದಿತ್ತು. ನಂತರ ಹೊಸದಾಗಿ ಬಂದ ಎಲ್ಲರನ್ನು ಒಂದು ಕಡೆ ಸೇರಿಸಲಾಯಿತು. ನಾಲ್ಕು ತಂಡಗಳಿಗೆ ಅನುಸಾರವಾಗಿ ಸ್ವಯಂಸೇವಕರನ್ನು ಬೇರೆ ಬೇರೆಯಾಗಿ ವಿಂಗಡಿಸಿ ಅದರ ಉಸ್ತುವಾರಿಯನ್ನು ನೀಡಲಾಯಿತು. ೧೧ ರ ಸಮಯಕ್ಕೆ ಕ್ರೀಡಾದಿನಕ್ಕೆ ಚಾಲನೆ ದೊರೆಯಿತು.
      ಪ್ರಪ್ರಥಮವಾಗಿ ಚಿಲಿಪಿಲಿ ಅಂದರೆ ಡಿ ಗುಂಪಿನಿಂದ ಆರಂಭವಾಯಿತು. ಅದೇ ಸಮಯಕ್ಕೆ ವಾಲಬಾಲ್ ಕೂಡ ಶುರುವಾಯಿತು. 
      ಚಿಲಿಪಿಲಿ ಮಕ್ಕಳಿಗೆ ಮೊದಲು ಓಟದ ಸ್ಪರ್ಧೆ ನಡೆಯಿತು, ನಂತರ ಕಪ್ಪೆ ಓಟ, ನಂತರ ಪಾಸಿಂಗ್ ದ ಬಾಲ್...ಹೀಗೆ ಅವರಿಗಿದ್ದ ಮೂರು ಆಟಗಳು ಸಂಪೂರ್ಣವಾದವು. ಆ ಪುಟಾಣಿ ಮಕ್ಕಳನ್ನು ಹಿಡಿದು ನಿಲ್ಲಿಸಿ ಆಡಿಸುವವದರೊಳಗೆ ಸ್ವಯಂಸೇವಕರು ಸುಸ್ತಾಗಿಹೋಗಿದ್ದರು. ಚಿಕ್ಕಮಕ್ಕಳೇ ಹಾಗೆ.... ಒಂದೆಡೆ ನಿಲ್ಲುವುದಿಲ್ಲವಲ್ಲ...

   ನಂತರ ಟೀಮ್ ಸಿ ಹುಡುಗಿಯರಿಗೆ ಓಟದ ಸ್ಪರ್ಧೆ, ಕಪ್ಪೆ ಓಟ, ಲೆಮೆನ್ ಆನ್ ದ ಸ್ಪೂನ್ ಆಡಿಸಲಾಯಿತು. ಎಲ್ಲರೂ ಬಹಳ ಸಂತೋಷದಿಂದ ಆಟದಲ್ಲಿ ಪಾಲ್ಗೊಂಡರು. ನಂತರ ಟೀಮ್ ಬಿ ಹುಡುಗಿಯರಿಗೆ ಓಟದ ಸ್ಪರ್ಧೆ, ಗೋಣಿಚೀಲದ ಓಟ, ಲೆಮೆನ್ ಆನ್ ದ ಸ್ಪೂನ್ ಆಡಿಸಲಾಯಿತು.   
                    ಅಮರೇಶ್ ಮತ್ತು ವೈಭವ್ ಕ್ಯಾಮರಾ ವನ್ನು ಹಿಡಿದು ಮಕ್ಕಳ ಆಟದ ಅದ್ಭುತ ಕ್ಷಣಗಳನ್ನು ಸರೆಹಿಡಿಯುತ್ತಿದ್ದರು. ಅವರು ಅಂದಿನ ಛಾಯಾಗ್ರಾಹಕರಾಗಿದ್ದರು.

       ಸ್ವಯಂಸೇವಕರೆಲ್ಲರೂ ಮಕ್ಕಳಿಗೆ ಸಹಕರಿಸುತ್ತ, ಎಲ್ಲ ಕಡೆಯೂ ಓಡಾಡುತ್ತ, ಮಕ್ಕಳ ಆಟದಲ್ಲಿ ಮೈಮರೆಯುತ್ತ ಆನಂದಿಸುತ್ತಿದ್ದರು.  ತಮ್ಮ ಯೋಜನೆ ಯಶಸ್ವಿಯಾಗುತ್ತಿರುವುದನ್ನು ಕಂಡು ಅದಕ್ಕಿಂತ ಮಕ್ಕಳ ಆ ಸಂತೋಷವನ್ನು ನೋಡಿ ಮೋನಿಷ್,  ಇಂದ್ರೇಷ್ ಮತ್ತೆಲ್ಲರ ಮುಖದಲ್ಲಿ ಮಂದಹಾಸ ನೃತ್ಯಮಾಡುತ್ತಿತ್ತು. 
      ಅದೇ ಸಂದರ್ಭಕ್ಕೆ ಅಂಜನ, ಸ್ಮೃತಿ ಎಂಬ ಮತ್ತಿಬ್ಬರು ಸ್ವಯಂಸೇವಕರು ಇವರನ್ನು ಸೇರಿದರು. ಇಲ್ಲಿ ಆಟಗಳು ನಡೆಯುತ್ತಿದ್ದಾಗ ಇಲ್ಲಿಯೂ ಸ್ವಲ್ಪ ಹೊತ್ತು ಇದ್ದು ಆಡಿಸಿ, ನಂತರ ಗುರುಕುಟೀರದಲ್ಲಿ ಸ್ವಯಂಸೇವಕರಿಗೆ ಕೃತಜ್ಞತಾ ಪತ್ರವನ್ನು ಸಿದ್ಧಪಡಿಸುವುದರ ಕೆಲಸದಲ್ಲಿ ತಲ್ಲೀನರಾದರು.
    ನಂತರ ಟೀಮ್ ಎ ಹುಡುಗಿಯರಿಗೆ ಓಟದ ಸ್ಪರ್ಧೆ, ನಂತರ ಟೀಮ್ ಸಿ ಹುಡುಗರಿಗೆ ಅದೇ ಮೂರು ಆಟವನ್ನು ಆಡಿಸಲಾಯಿತು. ಇದಾಗುವ ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಸಮಯ ಒಂದು ಗಂಟೆಯಾಗಿತ್ತು. ಎಲ್ಲರಿಗೂ ಭೋಜನ ವಿರಾಮವನ್ನು ನೀಡಲಾಯಿತು.  
       ಬಿಸಿಬೇಳೆಬಾತ್ , ಬೂಂದಿ , ಚಪಾತಿ ಪಲ್ಯ, ಬಾಳೆಹಣ್ಣುಗಳನ್ನು ಎಲ್ಲರೂ ಚಪ್ಪರಿಸಿ ತಿಂದರು. ಊಟದ ಮಾಡುವಾಗ ಎಲ್ಲರಲ್ಲೂ ಇದ್ದದ್ದು ಒಂದೇ ಭಾವ. ಅದೇ ಸಂತೋಷ, ಆನಂದ.

  ನಂತರ ೨ ಗಂಟೆಗೆ ಮಧ್ಯಾಹ್ನದ ಭಾಗ ಶುರುವಾಯಿತು.  ಟೀಮ್ ಎ ಹುಡುಗರಿಗೆ ಓಟದ ಸ್ಪರ್ಧೆ, ನಂತರ ಟೀಮ್ ಬಿ ಹುಡುಗರಿಗೆ ಓಟದ ಸ್ಪರ್ಧೆ, ಗೋಣಿಚೀಲದ ಸ್ಪರ್ಧೆ, ಲೆಮೆನ್ ಆನ್ ದ ಸ್ಪೂನ್ ಅನ್ನು ಆಡಿಸಲಾಯಿತು. ಅಲ್ಲಿಗೆ ಮುಕ್ಕಾಲು ಭಾಗದ ಕ್ರೀಡೆಗಳು ಸಂಪೂರ್ಣವಾಗಿದ್ದವು. ಇನ್ನು ಉಳಿದದ್ದು ಕಬ್ಬಡ್ಡಿ, ಕೋ ಕೋ ಎರಡು ಮಾತ್ರ.

      ನಂತರ ಹುಡುಗರಿಗೆ ಕಬಡ್ಡಿಯನ್ನು ಆಡಿಸಿದರು, ಅದೇ ಸಮಯದಲ್ಲಿ   ಹುಡುಗಿಯರಿಗೆ ಕೋ ಕೋ ವನ್ನು ಆಡಿಸಲಾಯಿತು. ಅದಕ್ಕೆ ಹೆಚ್ಚು ಸ್ವಯಂಸೇವಕರು ಬೇಕಾಗದ ಕಾರಣ ಕೆಲವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.   ಮೋನಿಷ್, ಇಂದ್ರೇಷ್ ಮಾತ್ರ ಕೊಂಚವೂ ವಿಶ್ರಾಂತಿ ತೆಗೆದುಕೊಳ್ಳದೆ ಕ್ರೀಡೆಗಳನ್ನು ಆಡಿಸುತ್ತಿದ್ದರು. ಯೋಜನೆಯ ಯಶಸ್ವಿಯು ಅವರನ್ನು ಮತ್ತೂ ಉತ್ತೇಜಿಸಿತ್ತು. ಅಂಜನ, ಸಾಯಿಚರಣ್ ಮತ್ತೆ ಸ್ಮೃತಿ  ಗುರು ಕುಠೀರದಲ್ಲಿ ಆಟದಲ್ಲಿ ಗೆದ್ದ ಮಕ್ಕಳಿಗೆ ಪ್ರಶಸ್ತಿ ಪತ್ರ ಬರೆಯುವುದರಲ್ಲಿ ನಿರತರಾಗಿದ್ದರು.    

ಹುಡುಗಿಯರಿಗೆ ಕೊಕೋ ನಂತರ ಕಬಡ್ಡಿಯನ್ನು ಆಡಿಸಲಾಯಿತು.  ಆ ಮೂಲಕ ಅಂದಿನ ದಿನದ ಎಲ್ಲಾ ಆಟಗಳು ಸಂಪೂರ್ಣವಾಗಿತ್ತು. ಆಗ ಸಮಯ ೩:೧೫. ಮಕ್ಕಳೆಲ್ಲರೂ ಬೆಳಿಗ್ಗೆಯಿಂದ ಆಡಿ ಆಡಿ ದಣಿವಾಗಿದ್ದರು. ಅವರು ವಿಶ್ರಾಂತಿಗೆಂದು ಹೋದರು. ಅವರ ಮುಖದಲ್ಲಿನ ಆ ಸಂತಸ ವನ್ನು ಕಂಡು ಸ್ವಯಂಸೇವಕರು ಸಂತೃಪ್ತರಾದರು. 
      ಇತ್ತ ವಿಜೇತರಿಗೆ ಪ್ರಶಸ್ತಿ ಪತ್ರಗಳೆಲ್ಲವೂ ಸಿದ್ಧವಾಗಿದ್ದವು. ಸ್ವಯಂಸೇವಕರು ಸಹ ಬೆಳಿಗ್ಗೆಯಿಂದ ದಣಿದಿದ್ದರಿಂದ ಕೆಲ ಕಾಲ ವಿಶ್ರಾಂತಿ ಪಡೆದರು.
     ೩:೪೦ ರ ಸಮಯಕ್ಕೆ ಸರಿಯಾಗಿ ಎನ್ ಐ ಇ ಕಾಲೇಜಿನ ದೈಹಿಕ ಶಿಕ್ಷಣಾಧಿಕಾರಿಯಾದ ಹೆಚ್ ಎನ್ ಶಂಕರನಾರಾಯಣರವರು ಆಗಮಿಸಿದರು. ಅವರು ಕ್ರೀಡಾ ದಿನೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಲ್ಲಾ ಸ್ವಯಂಸೇವಕರು ಮತ್ತು ಮಕ್ಕಳು ಅರವಿಂದು ಹಾಲ್ ನಲ್ಲಿ ಉಪಸ್ಥಿತರಾದರು. ಅಲ್ಲಿ ಆ ದಿನದ ಸಮಾರೋಪ ಕಾರ್ಯಕ್ರಮ ಪ್ರಾರಂಭವಾಯಿತು. 
       ಶಂಕರನಾರಾಯಣರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವನ್ನೂ, ಪ್ರಶಸ್ತಿ ಪತ್ರವನ್ನು  ನೀಡಿದರು.  ಅದನ್ನು ನೀಡಬೇಕಾದರೆ ಇಡೀ ಸಭಾಂಗಣ ಮಕ್ಕಳ ದನಿ, ಚಪ್ಪಾಳೆಯಲ್ಲಿ ತುಂಬಿ ತುಳುಕಾಡುತ್ತಿತ್ತು. ಎಲ್ಲರಲ್ಲೂ ಹರ್ಷೋದ್ಗಾರ. ಮಕ್ಕಳ ಮುಖದಲ್ಲಿ ಮುಗ್ಧ ಆನಂದ.  ಸ್ವಯಂಸೇವಕರಲ್ಲಿ ಸಾಧಿಸಿದ ಆನಂದ, ಕ್ರೀಡಾ ದಿನೋತ್ಸವವನ್ನು ಯಶಸ್ವಿ ಯಾಗಿ ನೆರವೇರಿಸಿದ ಆನಂದ. ಒಟ್ಟಿನಲ್ಲಿ ಎಲ್ಲವೂ ಸಂತಸಮಯ. 

         ನಂತರ ಶಂಕರನಾರಾಯಣ್ ರವರು ಒಂದೆರಡು ಮಾತುಗಳನ್ನಾಡಿದರು. ಅದರಲ್ಲಿ ಅವರು ಕಲಿಯುವ ಮನೆಯನ್ನು, ಅದಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನಂತರ ಎಲ್ಲರಿಗೂ ಸಿಹಿ ಹಂಚುವ ಮುಖಾಂತರ ಕಾರ್ಯಕ್ರಮ ಯಶಸ್ವಿಯಾಗಿ ಸಂಪೂರ್ಣವಾಯಿತು.
      ಸ್ವಯಂಸೇವಕರೆಲ್ಲರು ವಾಹಿನಿಯಲ್ಲಿ ಸೇರಿದರು. ಅಲ್ಲಿ ಅವರಿಗೆ ಕೃತಜ್ಞತಾ ಪತ್ರವನ್ನು ನೀಡಲಾಯಿತು. ಅಲ್ಲಿಗೆ ಆ ದಿನವೂ ಎಲ್ಲರ ಮನದಲ್ಲಿ ಮರೆಯಲಾಗದ ದಿನವಾಗಿ ಮೂಡಿತು.

      ಎಲ್ಲರೂ ಹಿಂದಿರುಗಿದರು. ಆದರೆ ಮತ್ತೇ ಬರಲೇಬೇಕಾಗುತ್ತದೆ. ಏಕೆಂದರೆ ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟಿದೆ. ಸದೃಢ ಭಾರತ ನಿರ್ಮಾಣವಾಗಬೇಕಿದೆ